Preface to my new book - Madhyastha - by HSV
ಮುನ್ನುಡಿ
ಸಮಕಾಲೀನ ಸಾಹಿತ್ಯ ಸಂದರ್ಭದ ಗಟ್ಟಿ ಕತೆಗಾರರಾದ ರಾಘವೇಂದ್ರಪಾಟೀಲರದ್ದು
ಸ್ವಲೋಲುಪ ವ್ಯಕ್ತಿತ್ವವಲ್ಲ. ಸದ್ಯದಲ್ಲಿ ಕ್ರಿಯಾಶೀಲರಾಗಿರುವ ಸರೀಕರು ಬರೆಯುತ್ತಿರುವ ಸಾಹಿತ್ಯ
ನಿರ್ಮಿತಿಗಳ ಬಗ್ಗೆ ಅತ್ಯಾಸಕ್ತಿ ಮತ್ತು ಉತ್ಸಾಹದಿಂದ ಮೊದಲಿಂದಲೂ ಬರೆಯುತ್ತ ಬಂದಿರುವ ಲೇಖಕರಲ್ಲಿ
ಅವರು ಮುಖ್ಯರು. ಬೇರೆಯವರ ಕೃತಿಗಳ ಬಗ್ಗೆ ಬರೆಯುವುದು ಅವರಿಗೆ ಮಾಡುತ್ತಿರುವ ಉಪಕಾರವೆಂದು ಅವರು
ಯಾವತ್ತೂ ಭಾವಿಸಿದವರಲ್ಲ. ಕನ್ನಡದ ಒಟ್ಟಾರೆ ಸಂದರ್ಭ ಕೊಳುಕೊಡುವಿಕೆಯಿಂದ ಸಮೃದ್ಧವಾಗಿ ಬೆಳೆಯಬೇಕೆಂಬುದು
ಅವರ ಅಪೇಕ್ಷೆ. ಸೃಜನ ಸ್ಪಂದನ ಎಂಬ ಈ ಸಂಪುಟದ ಮೊದಲ ವಿಭಾಗದಲ್ಲಿ ಈಚೆಗೆ ಬಂದ ಕನ್ನಡದ ಬಹು ಮುಖ್ಯವಾದ
ಹನ್ನೊಂದು ಪುಸ್ತಕಗಳ ಬಗ್ಗೆ ಅವರ ವಿನಯವನ್ನು ಬಿಟ್ಟುಕೊಡದ ನಿಷ್ಠುರ ಲೇಖನಗಳಿವೆ. ಇದೊಂದು ದಿಗ್ದರ್ಶೀ
ಕ್ರಮ. ನಾವು ಓದಲೇ ಬೇಕಾದ ಮಹತ್ವದ ಕೃತಿಗಳ ಬಗ್ಗೆ ಗಮನ ಸೆಳೆಯುವಂಥ, ಆ ಕೃತಿಗಳನ್ನು ನಾವು ಯಾಕೆ ಓದಬೇಕು ಎಂಬ ಬಗ್ಗೆ ನಿರ್ಮತ್ಸರದಿಂದ
ವಿಮರ್ಶಾ ಪ್ರತಿಪಾದನೆ ನಡೆಸುವ ವಿಭಾಗ. ಇಲ್ಲಿ ರಂಗಭೂಮಿಯ ಅದಮ್ಯ ಪ್ರತಿಭೆ ಬಿ.ಜಯಶ್ರೀ,
ಶಶಿಕಲಾ ವೀರಯ್ಯಸ್ವಾಮಿ ಬರೆದ
ಅನನ್ಯವಾದ ಆತ್ಮಕಥೆಗಳ ವಿವೇಚನೆಯಿದೆ. ಇವು ಓದುಗರು ಮೂಲ ಕೃತಿಗಳತ್ತ ಧಾವಿಸುವಂತೆ ಮಾಡುವ ಕೈಮರದಂಥ,
ಮೂಲ ಕೃತಿಗಳನ್ನು ಆಧಾರವಾಗಿಟ್ಟುಕೊಂಡು
ಬದುಕಿನ ಜಟಿಲತೆಯ ಬಗ್ಗೆ ಒಂದು ತಾತ್ವಿಕ ದರ್ಶನ ದಕ್ಕಿಸಿಕೊಳ್ಳಲು ಹಾತೊರೆಯುವಂಥ ಬರಹಗಳು.
ಸ್ವತಹ ಕತೆಗಾರರಾದ ಪಾಟೀಲರಿಗೆ ತಮ್ಮ ಸರೀಕ ಕತೆಗಾರರ ಬಗ್ಗೆ
ಇನ್ನಿಲ್ಲದ ಆಸಕ್ತಿ. ಇದು ನಿಜವಾದ ಸಾಹಿತ್ಯ ಪ್ರೀತಿಯ, ಅದಕ್ಕಿಂತ ಹೆಚ್ಚಾಗಿ ಅಹಂವೃತ್ತಿಯನ್ನು ದಾಟಿಕೊಳ್ಳುವ ಶ್ಲಾಘ್ಯ
ಪ್ರಯತ್ನ. ಈಗಾಗಲೇ ಕಥಾಜಗತ್ತಲ್ಲಿ ನೆಲೆಯೂರಿರುವ ಯೋಗಪ್ಪನಂಥವರ ಬಗ್ಗೆ ತೋರುವ ಕಾಳಜಿಯನ್ನೇ ಹೊಸ
ಕತೆಗಾರರಾಗಿ ಕಥಾಪ್ರಿಯರ ಆಸಕ್ತಿ ಕೆರಳಿಸಿದ ಪ್ರತಿಭಾಶಾಲಿ ಹೊಸಕತೆಗಾರರಾದ, ಕಾವ್ಯ ಕಡಮೆ, ಮೌನೇಶ ಬಡಿಗೇರ, ಟಿ.ಯೆಸ್.ಗೊರವರ, ಚೀಮನಹಳ್ಳಿ ರಮೇಶಬಾಬು ಅವರ ಬಗ್ಗೆಯೂ ತೋರಿಸುತ್ತಾರೆ. ಹೊಸ
ಲೇಖಕರ ಬಗ್ಗೆ ಪಾಟೀಲರು ತೋರುವ ಈ ನಿರ್ಮತ್ಸರ ಆಸಕ್ತಿ ಸಾಹಿತ್ಯ ಸಂಸ್ಕೃತಿಯ ಉಳಿವಿಗೆ ಬಹು ದೊಡ್ಡ
ಕಾಣಿಕೆಯಾಗುತ್ತದೆ. ಈ ಲೇಖನಗಳಲ್ಲಿ ಕಾಣುವ ಉತ್ಸಾಹ , ಪ್ರೀತಿ ಮತ್ತು ಕೃತಿಗಳ ಜೀವದ್ರವ್ಯವನ್ನು ಅನನ್ಯವಾಗಿ ಗ್ರಹಿಸುವ
ಕ್ರಮ ನಮ್ಮ ಹಿರಿಯ ಲೇಖಕರ ನೆನಪನ್ನು ಉದ್ದೀಪಿಸುವಂತಿದೆ. ಮಾಸ್ತಿ, ಕುವೆಂಪು, ಬೇಂದ್ರೆ, ಅಡಿಗ, ಅನಂತಮೂರ್ತಿ ಹಿಂದೆ ನಡೆಸಿದ್ದು ಇಂಥದ್ದೇ ಸಾಹಿತ್ಯಾಸಕ್ತಿಯ ನಿರ್ವ್ಯಾಜ ಸಾಹಿತ್ಯೋದ್ಯಮವನ್ನಲ್ಲವೆ?
ತಮ್ಮ ವಿಮರ್ಶೆ, ಪ್ರಕಾಶನ ಸಂಸ್ಥೆ, ಸಾಹಿತ್ಯ ಪತ್ರಿಕೆಗಳ ಸಂಪಾದನೆಯ ಸಂದರ್ಭಗಳಲ್ಲಿ ಪಾಟೀಲರು
ನಿರ್ವಹಿಸುತ್ತಿರುವುದು ಇಂಥದ್ದೇ ಕರ್ತವ್ಯಭಾರವನ್ನು.
ಸ್ವಾರ್ಥ ಮತ್ತು ಅಹಮಹಮಿಕೆಯಿಂದ ಸರೀಕರ ಸೃಜನಶೀಲತೆಯನ್ನು
ದಮನಗೊಳಿಸುವ, ಇಕ್ಕಿಮೆಟ್ಟುವ ಯತ್ನಗಳು
ನಿರಂತರವಾಗಿ ನಡೆಯುತ್ತಿರುವ ಈವತ್ತಿನ ಸಂದರ್ಭದಲ್ಲಿ ಪಾಟೀಲರ ಸಾಂಗೋಪನ ಪ್ರತಿಭೆ ಬಹು ಮಹತ್ವದ್ದೆನಿಸಿಸುತ್ತದೆ.
ಕನ್ನಡದ ಮಹತ್ವದ ಲೇಖಕ ಪಿ.ಲಂಕೇಶರ ಜೊತೆಗೆ ರಾಘವೇಂದ್ರ ಪಾಟೀಲ ನಡೆಸುವ ವಾಗ್ಯುದ್ಧ ಅರ್ಥಪೂರ್ಣವಾಗುವುದು
ಈ ಹಿನ್ನೆಲೆಯಲ್ಲಿ. ವಿಮರ್ಶೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ವಿಮರ್ಶೆಯ ಹಿಂದಿರುವ ಮನೋಧರ್ಮ. ಕಳೆಯನ್ನು
ಕೀಳುವ ರಭಸದಲ್ಲಿ ಬೆಳೆಯನ್ನೂ ಅಕಾಲ ಕುಯ್ಲಿಗೆ ಗುರಿಪಡಿಸುವ ಅಕ್ರಮವನ್ನು ಪಾಟೀಲರು ಮೊದಲಿನಿಂದಲೂ
ವಿರೋಧಿಸುತ್ತಾ ಬಂದಿದ್ದಾರೆ. ಇದರ ಜೊತೆಜೊತೆಗೇ ನನ್ನದೇ ಕೊನೆಯ ಮಾತು ಎಂಬ ನೆಲೆಯಲ್ಲಿ ಆಸ್ಫೋಟಗೊಳ್ಳುವ
ಕ್ರುದ್ಧ ನೆಲೆಯ ತಾತ್ವಿಕತೆಯನ್ನೂ ಅವರು ಉದ್ದಕ್ಕೂ ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಎಡ-ಬಲ-ಮಧ್ಯ
ಮಾರ್ಗಗಳ ಬಗ್ಗೆ ಪಾಟೀಲ ನಡೆಸುವ ಸಾಂಸ್ಕೃತಿಕ ಚರ್ಚೆಯನ್ನು ಈ ದೃಷ್ಟಿಯಿಂದ ನಾವು ಗಮನಿಸಬೇಕಾಗಿದೆ. ಮಧ್ಯಮಮಾರ್ಗ ಎಂಬುದು ಬುದ್ಧನ ತಾತ್ವಿಕತೆಯಿಂದ ಈವತ್ತು
ಬಹುದೂರ ಪಯಣಿಸಿದೆ. ಅನೇಕ ಅಪವ್ಯಾಖ್ಯಾನಗಳನ್ನು ತನ್ನ ಮೇಲೆ ಆವಾಹಿಸಿಕೊಂಡಿದೆ. ಮಧ್ಯಮ ಎಂಬುದು ಅತಂತ್ರಸ್ಥಿತಿಯ
ಎಡಬಿಡಂಗತ್ವ ಎನ್ನುವಂತಾಗಿರುವುದೇ ಅದರ ವಿರುದ್ಧ ಮಾತಾಡುತ್ತಿರುವವರ ನಿಲುವಿಗೆ ಮುಖ್ಯ ಕಾರಣವಾಗಿರುವಂತಿದೆ.
ಅದಕ್ಕಾಗಿಯೇ ಎಡ ಬಲಗಳ ಅತಿಗಳನ್ನು ಪ್ರಶ್ನಿಸುವ ಸಮತೋಲದ ಮಾರ್ಗಕ್ಕೆ ನಾವು ಈಗ ಬೇರೊಂದು ಪರಿಕಲ್ಪವನ್ನೇ
ನಿಯೋಜಿಸಕೊಳ್ಳಬೇಕಾಗಿದೆ. ಎಡದ ಪ್ರಶ್ನಿಸುವ, ಬಲದ ಒಪ್ಪಿಕೊಳ್ಳುವ ನಿಲುವುಗಳು ಯುಕ್ತವಾದ ಆತ್ಮಸಾಕ್ಷಿಯ ನೆಲೆಯಲ್ಲೇ ನಿರಂತರವಾಗಿ ಪರೀಕ್ಷಿಸಿಕೊಳ್ಳಬೇಕಾದಂಥವು.
ಅಡಿಗರು ಒಮ್ಮೆ ಹೇಳಿದಂತೆ ಇವು ಅತಿಯ ವಿರುದ್ಧ ಸಮತೋಲನ ಸ್ಥಾಪಿಸಲು ಲೇಖಕ ಆಯಾ ಸಂದರ್ಭದಲ್ಲಿ ಕೈಗೊಳ್ಳುವ
ಓಲುವಿಕೆಯ ಅನುಸಂಧಾನಗಳು. ಪಾಟೀಲ ತಮ್ಮ ಮಹತ್ವದ ಕಥೆ ಕಾದಂಬರಿಗಳಲ್ಲಿ ಮಾಡುತ್ತಾ ಬಂದಿರುವುದು ಅದನ್ನೇ.
ತೇರು, ಮಾಯಿಯ ಮುಖಗಳು, ಲಯ ಮೊದಲಾದ ಘನವಾದ ಕೃತಿಗಳ ಓಲುವಿಕೆಯ ಕ್ರಮ ಎಡಬಲಗಳ ಅತಿಯನ್ನು
ತಿರಸ್ಕರಿಸಿ ಓಲುವಿಕೆಯ ಪ್ರಮಾಣವನ್ನು ನಿರ್ಣಯಿಸುವ ಉಪಕ್ರಮಗಳೇ ಆಗಿವೆ. ಎಡ-ಬಲಗಳ ಸಮತೋಲನದ ಲೋಲಕವೇ
ಲೇಖಕನ ಆತ್ಮಾನುಸಂಧಾನವನ್ನು ನಿರ್ಣಯಿಸುವಂಥದ್ದು.
0
ಈ ಕೃತಿಯ `ಅಂತರಂಗದ ಪಿಸುನುಡಿಗಳು’ ಎನ್ನುವ, ಎರಡನೇ ಭಾಗದಲ್ಲಿ ಬರುವ ಸಂಸ್ಕೃತಿ, ಧರ್ಮ, ಸಾಮಾಜಿಕ ಚಿಂತನೆಗಳ ಪ್ರಬಂಧಗಳು ಸಾಹಿತ್ಯವನ್ನೂ ಬದುಕನ್ನೂ ಒಟ್ಟಿಗೇ ಮೂಲ ಸಾಮಗ್ರಿ ಮಾಡಿಕೊಂಡು
ಜೀವನದ ಹೊಸ ತಾತ್ವಿಕೆಗೆ ಹಂಬಲಿಸುವ ತನ್ಮಯ ಚಿಂತನಾಕ್ರಮಗಳು. ಸ್ವತಃ ಸಾಹಿತ್ಯದಿಂದಲೇ ತಮ್ಮ ಬದುಕಿನ
ಸಾರ್ಥಕತೆಯನ್ನು ಕಂಡುಕೊಳ್ಳುವೆನೆಂಬ ನಚ್ಚಿನ ಪಾಟೀಲರು ಸಾಹಿತ್ಯವೆಂಬುದೊಂದೇ ಸೃಜನಶೀಲತೆಯೇ ಎಂಬ
ಪ್ರಶ್ನೆಯನ್ನೂ ಕೇಳಿಕೊಳ್ಳಲು ಹಿಂಜರಿಯದಂಥವರು. ವರ್ತಮಾನದ ತಲ್ಲಣಗಳ ಬಗ್ಗೆ ಸದಾ ಅಲ್ಲೋಲಕಲ್ಲೋಲವಾಗುವ
ಪ್ರಕ್ಷುಬ್ಧತೆ ಅವರಿಗಿದೆ. ಅದನ್ನು ಶಮಸ್ಥಿತಿಗೆ ತರುವ ಹೋರಾಟಗಳೂ ಅಲ್ಲಿವೆ. ಮತ್ತೆ ಮತ್ತೆ ತಣಿಯುವ,
ಮತ್ತೆ ಮತ್ತೆ ತಲ್ಲಣಿಸುವ ಅವರ
ಮನೋಪ್ರವೃತ್ತಿಯೇ ಅವರ ಸೃಷ್ಟಿಶೀಲತೆಯ ಜೀವಂತಿಕೆಗೆ ಕಾರಣವಾಗಿದೆ. ಪೆÇಲಿಟಿಕಲಿ ಕರೆಕ್ಟಾಗಬೇಕೆಂಬ ನಯಗಾರಿಕೆ ಅವರಲ್ಲಿ ಯಾವತ್ತೂ
ಕಾಣದು. ಜೀವವಿರೋಧಿ ಎನಿಸುವ ನಿಲುವುಗಳಿಗೆ ಮೊದಲಿಂದಲೂ ಗುಮ್ಮುತ್ತಾ ಬಂದವರು ಅವರು. ಸ್ಥಾಪಿತ ಸಂಸ್ಥೆಗಳ
ವಿರುದ್ಧ, ಘನಂದಾರಿ ವ್ಯಕ್ತಿತ್ವಗಳ
ವಿರುದ್ಧ ನಿರ್ಭಯದಿಂದ ಗುಮ್ಮುವ ಸಾಹಸವನ್ನು, ಸಾಹಸ ಎನ್ನುವುದಕ್ಕಾಗಿಯಲ್ಲ, ಕರ್ತವ್ಯ ಎಂಬ ಕಾರಣಕ್ಕಾಗಿ
ಅವರು ನಡೆಸುತ್ತಾ ಬಂದಿದ್ದಾರೆ. ಲಂಕೇಶ, ಅನಂತಮೂರ್ತಿ,
ಚಂಪಾ ಮೊದಲಾಗಿ ಎಲ್ಲ ಮಹತ್ವದ
ಲೇಖಕರ ಜೊತೆಗೂ ಅವರ ಅಸಮ್ಮತಿ ಮತ್ತು ಜಗಳಗಳಿವೆ. ಆದರೆ ಅವು ಯಾವತ್ತೂ ವೈಯಕ್ತಿಕ ನೆಲೆಯ ಅಹಮ್ಮಿನ
ಪ್ರದರ್ಶನಗಳಾಗಿಲ್ಲ. ಪಾಟೀಲರಲ್ಲಿ ನಾನು ಮೆಚ್ಚುವುದು ಅದನ್ನೇ. ಹಠ ಇದೆ. ಅದು ಸರಿಯಲ್ಲವೆಂದು ತೋರಿದಾಗ
ಅದನ್ನು ತಿದ್ದಿಕೊಳ್ಳುವ ಆತ್ಮವಿಮರ್ಶೆಯೂ, ಬದುಕು ಪಕ್ವವಾದಂತೆ ಅವರಿಗೆ ದಕ್ಕೀತೆಂಬುದು ನನ್ನ ವಿಶ್ವಾಸವಾಗಿದೆ. ಅನಂತಮೂರ್ತಿ ಮೋದಿಯ ಬಗ್ಗೆ
ಆಡಿದ ಮಾತುಗಳ ಬಗ್ಗೆ ಪಾಟೀಲ ಎತ್ತುವ ಪ್ರಶ್ನೆಗಳಿಗೆ ಅನಂತಮೂರ್ತಿಯವರ ಆರ್ದ್ರತೆಯೇ ಉತ್ತರವಾಗುವುದು
ಅನುಸರಣೀಯ ಮಾರ್ಗವಾಗಿದೆ. ವಿರೋಧವನ್ನು ಒಪ್ಪಿಕೊಳ್ಳುವುದಲ್ಲ; ಸಹಿಸುವುದು ಬಹು ದೊಡ್ಡ ನಿಲುವೆಂಬುದನ್ನು ಕನ್ನಡ ಸಾಕ್ಷೀ
ಪ್ರಜ್ಞೆ ಮೊದಲಿಂದಲೂ ನಮಗೆ ಬೋಧಿಸುತ್ತಾ ಬಂದಿದೆ. "ಕಾಲನೇ..ಜೀವಕ್ಕೆ ಮಾಗಲು ಬಿಡು"
ಎಂಬ ಪಾಟೀಲರ ಎದೆಯಾಳದ ಮೊರೆ ಸಾರಿಯಾದ ದಿಕ್ಕಿನತ್ತಲೇ ಪ್ರವಹಿಸುತ್ತಲಿದೆ.
ಪಾಟಿಲರ ಕೃತಿಯ ಮೂರನೇ ಭಾಗದ ಲೇಖನಗಳು ನಮ್ಮ ಪ್ರಜ್ಞೆಗೆ
ಮುಸುಕುವ ಕಾಳಿಕೆಯನ್ನು ಚಿವುಟಿ ದೀಪವನ್ನು ಪೆÇ್ರೀಜ್ವಲಿಸುವ ವ್ರತದಲ್ಲಿ ತೊಡಗಿರುವ ಬರವಣಿಗೆಗಳು! ದೀಪವು ಬೆಂಕಿ ಮತ್ತು ಮತ್ತು ಬೆಳಕು ಎರಡನ್ನೂ
ಉತ್ಪಾದಿಸುವುದೆಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಕುವೆಂಪು, ಅಡಿಗ, ಲಂಕೇಶ, ಅನಂತಮೂರ್ತಿಯಂಥ ಲೇಖಕರು
ನನ್ನ ಧ್ಯಾನದ ಲೇಖಕರಾಗಿರುವುದು ಅದಕ್ಕಾಗಿಯೇ. ಅಲ್ಲಿ ಬೆಂಕಿ ಮತ್ತು ಬೆಳಕು ಎರಡನ್ನೂ ಉತ್ಪಾದಿಸುವ
ಶಕ್ತಿ ಕ್ರಿಯಾಶೀಲವಾಗಿರುತ್ತದೆ. ರಾಘವೇಂದ್ರ ಪಾಟೀಲರೂ ಅದೇ ಪೂರ್ವಸೂರಿಗಳ ಮಾರ್ಗದಲ್ಲಿ ಮುನ್ನುಗ್ಗುತ್ತಿರುವ
ಉದ್ವಿಗ್ನ ಪ್ರತಿಭೆ. ಅವರ ಮನಸ್ಸಿಗೆ ತಣಿವನ್ನು ನಾನು ಹಾರೈಸಲಾರೆ. ಉರಿಯುವುದೇ ಅದರ ಜೀವಧರ್ಮವಾಗಿದೆ.
ಸ್ನೇಹವನ್ನು ಕಳೆದುಕೊಳ್ಳದಂತೆ ಸಮರದಲ್ಲಿ ತೊಡಗುವುದು-ಗೀತೆಯ ಅಂತರಾರ್ಥಗಳಲ್ಲಿ ಇದೂ ಒಂದು. ಉರಿದೀಪ
ಮತ್ತು ತೈಲಧಾರೆಗಳಲ್ಲಿ ತೈಲಧಾರೆ ನನಗೆ ಪ್ರಿಯವಾದ ಜೀವರೂಪಕವಾದರೆ, ಪಾಟಿಲರಿಗೆ ಮತ್ತು ನಾನು ಈ ಹಿಂದೆ ಪ್ರಸ್ತಾಪಿಸಿದ ಲೇಖಕರಿಗೆ
ಉರಿದೀಪವೇ ಪ್ರಧಾನವಾದ ಜೀವಪ್ರತೀಕ. ಅಹಂಕಾರದಹನ ಮತ್ತು
ಪರಪ್ರಕಾಶನ ಪ್ರವೃತ್ತಿ ಒಂದು ಅಗ್ನಿದಿವ್ಯ. ಅದರಲ್ಲಿ ಮಾಗಿ ಪಕ್ವವಾಗುವ ಆತ್ಮವೃತ್ತಿ ನನ್ನ ಪ್ರಿಯ
ಸೋದರ ಪಾಟೀಲರಿಗುಂಟು.
0
ಲೋಕಸಂಸಾರಿ ಎಂದು ಹೇಳಿಕೊಳ್ಳುವವರಿಗೂ
ಒಂದು ಖಾಸಗಿ ಸಂಸಾರ ಇದ್ದೇ ಇರುತ್ತದೆ. ಲೋಕ ಸಂಸಾರಕ್ಕಾಗಿ ಖಾಸಗಿ ಸಂಸಾರವನ್ನು ತ್ಯಜಿಸಿ ಹೋಗುವ
ಕ್ರಮ ಒಂದು. ಲೋಕ ಸಂಸಾರವನ್ನು, ಖಾಸಗಿ ಸಂಸಾರವನ್ನು
ಹಚ್ಚಿಕೊಂಡೇ ನಿಭಾಯಿಸುವುದು ಇನ್ನೊಂದು ಕ್ರಮ. ಬುದ್ಧನದ್ದು ಮೊದಲ ಕ್ರಮ; ಬಸವ-ಪುರಂದರರದ್ದು ಎರಡನೇ ಕ್ರಮ. ಕವಿ-ಕಲಾವಿದರು ಹೆಚ್ಚಾಗಿ
ಬಸವ ಪುರಂದರರ ಕ್ರಮವನ್ನೇ ಅನುಸರಿಸುವಂಥವರು.
ಕಲಾವಿದರು ಲೋಕ ಸಂಸಾರವನ್ನು
ಗ್ರಹಿಸುವುದು ಖಾಸಗಿ ಸಂಸಾರದೊಂದಿಗೆ ತಮಗಿರುವ ಸಂಬಂಧದ ಮೂಲಕವೇ. ಮನೆಯೆಂಬ ಕಾಂಡದಿಂದ ಒಡೆದ ಟಿಸಿಲುಗಳ
ಹಾಗೆ ಲೋಕ ಸಂಸಾರ. ತಮ್ಮ ಕೃತಿಯ ನಾಲಕ್ಕನೇ ಭಾಗದಲ್ಲಿ ಪಾಟೀಲರ ಖಾಸಗಿ ಸಂಸಾರ ಅನಾವರಣಗೊಳ್ಳುವ ಮೂಲಕವೇ
ಅವರ ಲೋಕ ಸಂಸಾರದ ಅಭಿವ್ಯಕ್ತಿಯೂ ಸಾಧಿತವಾಗುತ್ತದೆ. ಅವರ ನಿಡಿದಾದ ಹಾಗೂ ತೀವ್ರವಾದ ಅನುಭವ ಜಗತ್ತು
ಅನಾವರಣಗೊಳ್ಳುವುದು ಎಂದರೆ ಲೇಖಕನ ಅಂತರಂಗದ ಅನಾವರಣವೇ! ಬಹು ವಿಸ್ತಾರವಾದದ್ದು ಪಾಟೀಲರ ಅನುಭವ ಜಗತ್ತು.
ವೈವಿಧ್ಯಮಯ ವ್ಯಕ್ತಿಗಳು, ಘಟನೆಗಳು, ವಿಸ್ತಾರವಾದ ಓದು, ಆಳವಾದ ಪರಿಭಾವನೆಗಳಿಂದ ಪಾಟೀಲರ ಲೋಕಸಂಸಾರ ಅವರ ಖಾಸಗಿ
ಸಂಸಾರದ ಕರ್ಷಣೆಯಿಂದಲೇ ಆಕಾರ ಪಡೆಯುತ್ತದೆ. ಯಾವುದು ಬಹಿರಂಗ, ಯಾವುದು ಅಂತರಂಗ ಎಂದು ಬೇರ್ಪಡಿಸಲಾಗದಂತೆ ಈ ಒಳ-ಹೊರ-ನಿಕಟ-ದೂರ
ಸಂಪರ್ಕಗಳು ಹೆಣೆದುಕೊಳ್ಳುತ್ತವೆ. `ಎಷ್ಟು ಕಾಡತಾವ ಕಬ್ಬಕ್ಕಿ...’
ಎಂಬ ಕಥೆಯ ಅವಸ್ಥಾಂತರಗಳನ್ನು
ಪಾಟೀಲ ವಿವರಿಸಿರುವ ರೀತಿ ಸೃಷ್ಟಿಶೀಲತೆಯ ನಿಗೂಢ ಜಗತ್ತಿಗೆ ನಮ್ಮನ್ನು ಕರೆದೊಯ್ಯುತ್ತದೆ. ಸ್ಫಟಿಕದ
ಮೂಲಕ ಹಾಯುವ ಬೆಳ್ಳನೆ ಬೆಳಕಿನ ಕಿರಣಗಳು ಸ್ಫಟಿಕದ ಆಚೆ ಬರುವಾಗ ಬಣ್ಣಬಣ್ಣದ ಎಳೆಗಳಾಗಿ ವಿಂಗಡಗೊಳ್ಳುವ
ಚೋದ್ಯವನ್ನು ಪುತಿನ ಸೃಷ್ಟಿಶೀಲತೆಗೆ ಯಾವಾಗಲೂ ಹೋಲಿಸುತ್ತಾ ಇದ್ದರು. ಒಂದು ಕಥೆ ಚಿತ್ತಾಲ,
ಗಿರಡ್ದಿ, ಮಲ್ಲಿಕಾರ್ಜುನ ಹಿರೇಮಠ ಹೀಗೆ ಬೇರೆ ಬೇರೆ ಸ್ಫಟಿಕಗಳ ಮೂಲಕ
ಹಾಯುತ್ತಾ ಹಾಯುತ್ತಾ ಪಡೆಯುವ ವರ್ಣಾಂತರಗಳ ರೋಚಕ ವರ್ಣನೆ ಈ ಲೇಖನದಲ್ಲಿ ಇದೆ.
ರೋಚಕತೆ ಮತ್ತು ಸಂಘರ್ಷ
ಪ್ರಧಾನ ತುಡಿತಗಳಿಗೆ ಮನಸ್ಸು ತೆತ್ತ ಸಮಾಜ ಸ್ನೇಹ ಸೌಹಾರ್ದಗಳಿಗೆ ವಿಮುಖವಾಗುವ ದುರಂತವನ್ನು ಇನ್ನೊಂದು
ಪ್ರಬಂಧ ನೋವಿನಿಂದ ಆಲಾಪಿಸುತ್ತದೆ. ಭೇದದಿಂದ ಬಿಡುಗಡೆಗೊಳಿಸಯ್ಯಾ ಎಂಬ ಬಸವಣ್ಣನವರ ಒಂದು ಮಾತು ವರ್ತಮಾನದ
ಮನೋಭೂಮಿಕೆಯನ್ನು ಬಗೆಯುತ್ತಾ ಬಗೆಯುತ್ತಾ ಪ್ರಸ್ತುತ ಸಮಾಜದ ಆಸಕ್ತಿಗಳ ದುರಂತ ದರ್ಶನ ಮಾಡಿಸುತ್ತದೆ.
ಪಾಟೀಲರು ಅವರ ತಂದೆ ಬಳವಂತರಾವ್ ಪಾಟೀಲರ ಬಗ್ಗೆ ಬರೆದ ಲೇಖನವಂತೂ ನನಗೆ ಪುತಿನ ಅವರ ಗೋಕುಲಾಷ್ಟಮಿ
ಪ್ರಬಂಧವನ್ನು ನೆನಪಿಸುವಷ್ಟು ಆರ್ದ್ರವಾಗಿದೆ. ಈ ವಿಭಾಗದಲ್ಲಿ ನನ್ನ ಮನಸ್ಸನ್ನು ಸಂಪೂರ್ಣವಾಗಿ ಆವರಿಸಿದ
ಪ್ರಬಂಧ-`ಇವರೂ ನಮ್ಮಂತಹ ಮನುಷ್ಯರೇ!’
ಈ ಕಥಾಪ್ರಬಂಧದ ಮುಖ್ಯ ಪಾತ್ರ
ಪಾಟೀಲರ ಅಜ್ಜ ಶ್ರೀನಿವಾಸ ಪಾಟೀಲರು. ಮೊಮ್ಮಗಳ ಮದುವೆ ಮುಗಿಸಿ, ಎಷ್ಟೋ ವರ್ಷಗಳಾದ ಮೇಲೆ ಅವಳು ದೊಡ್ಡವಳಾಗಿ ಆಕೆಯನ್ನು ಗಂಡನ
ಮನೆಗೆ ಕರೆದೊಯ್ಯುವ ಸಂದರ್ಭ. ಆ ಪುಟ್ಟ ಹುಡುಗಿಯನ್ನು ಕೊಟ್ಟಿರುವುದು ಮಧ್ಯವಯಸ್ಸಿನ ಗೋಪಾಳಾಚಾರ್ಯ
ಲೋಕಾಪುರ ಅವರಿಗೆ. ಆತ ಅರೆಹುಚ್ಚ ಬೇರೆ. ಹಾಗಿದ್ದೂ ಪರಮ ಮುಗ್ಧೆ ಅಹಲ್ಯೆ(ಅಯಿಲಿ)ಯನ್ನು ಆತನಿಗೆ
ಕೊಟ್ಟು ಮದುವೆ ಮಾಡಿದ್ದು ಯಾತಕ್ಕೆ? ಅವರು ದೊಡ್ಡ ಜಮೀನ್ದಾರರು
ಎಂಬ ಒಂದೇ ಕಾರಣಕ್ಕೆ ಅಲ್ಲವೆ? ಅಯಿಲಿಯನ್ನು ಗಂಡನ ಮನೆಗೆ
ಕರೆದೊಯ್ಯುವಾಗ ಗಂಡನ ಮನೆಯವರು ವಧುವಿಗೆ ಕೊಟ್ಟಿದ್ದ ಅದೆಷ್ಟೋ ವಡವೆಗಳ ದೊಡ್ಡ ಗಂಟೇ ಇದೆ! ಹೆಣ್ಣಿನೊಂದಿಗೆ
ಅವರ ಹೊನ್ನನ್ನೂ ಒಪ್ಪಿಸಬೇಕಲ್ಲ! ಗಾಡಿ ಪ್ರಯಾಣ. ಮಧ್ಯೆ ಒಂದು ಬಂಗಲೆಯಲ್ಲಿ ಉಳಿದು ಮಾರನೆ ಬೆಳಿಗ್ಗೆ
ಈ ಸಂಸಾರ ಬಂಡಿಪ್ರಯಾಣ ಮುಂದುವರೆಸುತ್ತದೆ. ಹೋಗುವಾಗ ಒಡವೆಯ ಗಂಟನ್ನು ಹೆಣ್ಣುಮಕ್ಕಳು ಬಂಗಲೆಯಲ್ಲೇ
ಮರೆತು ಬಂದಿದ್ದಾರೆ. ಅದು ಅಜ್ಜನಿಗೆ ತಿಳಿಯದು. ಬಿಟ್ಟು
ಬಂದಿರುವ ಕೈಗೋಲಿಗಾಗಿ ಅವರು ಬಂಗಲೆಗೆ ಹಿಂದಿರುಗಿದಾಗ ಬಂಗಲೆಯಲ್ಲಿದ್ದ ಕಸಗುಡಿಸುವ ವೃದ್ಧೆ ಕೋಲಿನ
ಜೊತೆಗೆ ಒಡವೆಯ ಗಂಟನ್ನೂ ತಾತನಿಗೆ ಹಿಂದಿರುಗಿಸುತ್ತಾಳೆ! ಇವರೂ ಮನುಷ್ಯರೇ! ಆದರೆ ನಾವು ಅವರಂತಿದ್ದೇವೆಯೇ?
ಇದು ಕತೆಗಾರ ಪಾಟಿಲ ಎತ್ತುವ ಎದೆ
ನಡುಗಿಸುವ ಪ್ರಶ್ನೆ! ಈ ಕಥಾಪ್ರಬಂಧ ಓದಿ ಮುಗಿಸಿದಾಗ ಆ ಕಸಗುಡಿಸುವ ಬಡ ಮುದುಕಿಯ ಬಗ್ಗೆ ನಮಗೆ ಉಂಟಾಗುವ
ಗೌರವ ಎಂಥದ್ದು. ನಮ್ಮನ್ನು ಅವಳ ಜಾಗದಲ್ಲಿ ಇರಿಸಿಕೊಂಡು ನೋಡಿದಾಗ ಹುಟ್ಟುವ ಎದೆಕಲಕುವ ಪ್ರಶ್ನೆ
ಎಂಥದ್ದು! ನಿರೂಪಣೆಯ ರೋಚಕ ಕಥನ ಕಳೆದು ಹೋದ ಜಗತ್ತನ್ನು ನಮ್ಮ ಕಣ್ಣಮುಂದೆ ನಿಲ್ಲಿಸುವಷ್ಟು ಸಶಕ್ತವಾಗಿದೆ.
ಪಾಟೀಲ ಎಂಥ ಕತೆಗಾರರು ಎಂಬುದು ಅವರ ಪ್ರಬಂಧ ವಿಮರ್ಶೆಗಳಲ್ಲೂ ಅಭಿವ್ಯಕ್ತವಾಗುತ್ತದೆ.
- ಎಚ್.ಎಸ್.ವೆಂಕಟೇಶಮೂರ್ತಿ